ನವದೆಹಲಿ: ನಾಳೆ ಉಪರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ದೇಶದ 16 ನೇ ಉಪರಾಷ್ಟ್ರಪತಿ ಆಯ್ಕೆಗಾಗಿ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು ಮತ ಚಲಾಯಿಸಲಿದ್ದಾರೆ.
ವೆಂಕಯ್ಯ ನಾಯ್ಡು ಅವರ ಅಧಿಕಾರಾವಧಿ ಆಗಸ್ಟ್ 10 ಕ್ಕೆ ಕೊನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಜುಲೈ 5 ರಂದು ಉಪರಾಷ್ಟ್ರಪತಿ ಚುನಾವಣೆ ಪ್ರಕ್ರಿಯೆ ಆರಂಭವಾಗಿದ್ದು, ಜುಲೈ 19 ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿತ್ತು. ಈ ಬಾರಿ ಉಪರಾಷ್ಟ್ರಪತಿ ಹುದ್ದೆಗೆ ಎನ್ಡಿಎ ಅಭ್ಯರ್ಥಿಯಾಗಿ ಜಗದೀಪ್ ಧನ್ಕರ್ ಮತ್ತು ವಿಪಕ್ಷಗಳ ಅಭ್ಯರ್ಥಿಯಾಗಿ ಮಾರ್ಗರೇಟ್ ಆಳ್ವ ಕಣದಲ್ಲಿದ್ದಾರೆ. ಎನ್ ಡಿ ಎ ಪರ ಹೆಚ್ಚು ಸದಸ್ಯರ ಬಲ ಇರುವುದರಿಂದ ಜಗದೀಪ್ ಧನ್ ಕರ್ ಸುಲಭವಾಗಿ ಗೆಲುವು ಸಾಧಿಸುವ ನಿರೀಕ್ಷೆ ಇದೆ.
ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರೆದ ವರುಣನ ರಣಾರ್ಭಟ… ಇನ್ನೂ ಮೂರು ದಿನ ಮುಂದುವರೆಯಲಿದೆ ಮಳೆ…
ತೆಲಂಗಾಣ ರಾಷ್ಟ್ರ ಸಮಿತಿ ಇಂದು ಮಾರ್ಗರೇಟ್ ಆಳ್ವ ಅವರಿಗೆ ಬೆಂಬಲ ಸೂಚಿಸಿದೆ. ಎರಡು ದಿನದ ಹಿಂದೆ ಆಮ್ ಆದ್ಮಿ ಪಕ್ಷ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷಗಳು ಆಳ್ವ ಅವರಿಗೆ ಬೆಂಬಲ ಸೂಚಿಸಿದ್ದವು. ಇನ್ನು ಎನ್ ಡಿಎ ಗೆ ಜನತಾದಳ (ಯು), ಬಿಎಸ್ ಪಿ, ವೈಎಸ್ ಆರ್ ಕಾಂಗ್ರೆಸ್, ಎಐಎಡಿಎಂಕೆ, ಶಿವಸೇನೆ ಪಕ್ಷಗಳ ಬೆಂಬಲವಿದೆ. ಇನ್ನು 23 ಲೋಕಸಭೆ ಮತ್ತು 16 ರಾಜ್ಯಸಭೆ ಸದಸ್ಯರನ್ನು ಹೊಂದಿರುವ ತೃಣಮೂಲ ಕಾಂಗ್ರೆಸ್ ಉಪರಾಷ್ಟ್ರಪತಿ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ತಿಳಿಸಿದೆ.
ಉಪರಾಷ್ಟ್ರಪತಿ ಚುನಾವಣೆಯಲ್ಲಿ ಲೋಕಸಭೆ ಸದಸ್ಯರು, ರಾಜ್ಯಸಭೆ ಸದಸ್ಯರು ಮತ್ತು ನಾಮನಿರ್ದೇಶಿತ ಸದಸ್ಯರು ಸೇರಿ ಒಟ್ಟು 788 ಸದಸ್ಯರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಇವರ ಮತ ಮೌಲ್ಯ ಒಂದು ಆಗಿರುತ್ತದೆ. ಸೀಕ್ರೆಟ್ ಬ್ಯಾಲೆಟ್ ಓಟಿಂಗ್ ಪದ್ಧತಿಯಲ್ಲಿ ಮತದಾನ ನಡೆಯಲಿದ್ದು, ಪ್ರತಿಯೊಬ್ಬ ಸದಸ್ಯರೂ ಅಭ್ಯರ್ಥಿಗಳ ಹೆಸರಿನ ಮುಂದೆ ತಮ್ಮ ಆದ್ಯತೆಯ ಮತವನ್ನು ನೀಡಬೇಕು. ನಾಳೆ ಬೆಳಗ್ಗೆ 10 ಗಂಟೆಯಿಂದ 5 ಗಂಟೆಯವರೆಗೆ ಸಂಸತ್ ಭವನದಲ್ಲಿ ಮತದಾನ ನಡೆಯಲಿದ್ದು, 5 ಗಂಟೆಯ ಬಳಿಕ ಮತ ಎಣಿಕೆ ನಡೆಯಲಿದ್ದು, ಬಳಿಕ ನೂತನ ಉಪ ರಾಷ್ಟ್ರಪತಿಯನ್ನು ಘೋಷಿಸಲಾಗುವುದು.