ಬೆಂಗಳೂರು: ಹೊಟ್ಟೆ ನೋವು, ಹೊಟ್ಟೆ ಬೊಜ್ಜು, ಜೀರ್ಣಕ್ರಿಯೆ ಸಮಸ್ಯೆಯಿಂದ ಬಳಲುವವರೇ ಹೆಚ್ಚು, ಈ ಎಲ್ಲಾ ರೋಗಕ್ಕೂ ಯೋಗ (Yoga) ಒಳ್ಳೆಯ ಮದ್ದು. ಯೋಗವನ್ನು ನಿರಂತರವಾಗಿ ಮಾಡುತ್ತಾ ಬಂದರೆ ರೋಗಗಳಿಂದ ಗುಣಮುಖವಾಗುತ್ತೀರಿ ಮತ್ತು ಯಾವುದೇ ರೋಗ ಬರದಂತೆ ಇದು ದೇಹವನ್ನು ರಕ್ಷಿಸುತ್ತದೆ. ಇತ್ತೀಚಿನ ದಿನದಲ್ಲಿ ಯೋಗದ ಬಗ್ಗೆ ಜನರ ಆಸಕ್ತಿ ಹೆಚ್ಚಾಗುತ್ತಿದ್ದು, ಯೋಗ ನಮ್ಮ ದೇಹಕ್ಕೆ ಮಾತ್ರವಲ್ಲ ನಮ್ಮ ಆತ್ಮಕ್ಕೂ ಶಕ್ತಿ ನೀಡುತ್ತೆಂದು ಯೋಗ ತಜ್ಞರು ಸಲಹೆ ನೀಡುತ್ತಾರೆ.
ಯೋಗವನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ಸಾಕಷ್ಟು ಪ್ರಯೋಜನವಿದೆ. ಯೋಗದಲ್ಲಿ ಅನೇಕ ಆಸನಗಳನ್ನು ಕಾಣಬಹುದು, ಒಂದೊಂದು ಆಸನವೂ ಹತ್ತಾರು ಲಾಭವನ್ನು ನೀಡುತ್ತದೆ. ರೋಗಗಳ ನಿಯಂತ್ರಣಕ್ಕೆ ಯೋಗ ಮದ್ದು. ಇದು ನಮ್ಮ ದೇಹಕ್ಕೆ ರೋಗ (Disease) ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಶಕ್ತಿ ನೀಡುತ್ತದೆ. ನಿಯಮಿತವಾಗಿ ಯೋಗ ಮಾಡುವುದರಿಂದ ದೇಹ ಮತ್ತು ಮನಸ್ಸು ಸದೃಢವಾಗಿರುತ್ತದೆ. ಇಂದು ನಿಮಗೆ ಉತ್ತಾನಾಸನದ ಬಗ್ಗೆ ತಿಳಿಸುತ್ತೇವೆ ಮಿಸ್ ಮಾಡದೇ ಈ ಸ್ಟೋರಿ ಓದಿ…
ಉತ್ತಾನ ಪಾದಾಸನ (Uttanpadasana) : ಉತ್ತಾನ ಪಾದಾಸನದಲ್ಲಿ ಉತ್ತನ್ ಎಂದರೆ ಮೇಲಕ್ಕೆತ್ತಿದ ಮತ್ತು ಪಾದ ಎಂದರೆ ಕಾಲು ಎಂದರ್ಥವಾಗುತ್ತದೆ. ಈ ಭಂಗಿಯಲ್ಲಿ ಕಾಲುಗಳನ್ನು ಮೇಲಕ್ಕೆ ಎತ್ತಬೇಕು. ಹೀಗಾಗಿ ಇದನ್ನು ಉತ್ತಾನಪಾದಾಸನ ಎನ್ನುತ್ತಾರೆ. ಇದನ್ನು ನಿಯಮಿತವಾಗಿ ಅಭ್ಯಾಸ ಮಾಡೋದ್ರಿಂದ ಅನೇಕ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದಾಗಿದೆ.
ಉತ್ತಾನ ಪಾದಾಸನ ಮಾಡುವ ವಿಧಾನ ಹೇಗೆ : ಯಾವುದೇ ಆಸನ ಮಾಡುವಾಗ ಮೊದಲು ಸರಿಯಾದ ಜಾಗದಲ್ಲಿ ಕುಳಿತುಕೊಳ್ಳಬೇಕು. ಸಮತಟ್ಟಾದ ಸ್ಥಳದಲ್ಲಿ ಮಲಗಿಕೊಳ್ಳಿ. ಯೋಗವನ್ನು ಬರೀ ನೆಲದ ಮೇಲೆ ಮಾಡಬಾರದು. ಹಾಗಾಗಿ ಮ್ಯಾಟ್ ಬಳಕೆ ಮಾಡಿ. ನಂತರ ಎರಡೂ ಕಾಲ್ಬೆರಳುಗಳನ್ನು ಒಟ್ಟಿಗೆ ಸೇರಿಸಬೇಕು. ಉಸಿರು ತೆಗೆದುಕೊಳ್ಳುತ್ತ ಇಡೀ ದೇಹವನ್ನು ಹಗುರಗೊಳಿಸಿಕೊಳ್ಳಿ. ನಂತರ ಮತ್ತೆ ದೀರ್ಘವಾಗಿ ಉಸಿರನ್ನು ತೆಗೆದುಕೊಂಡು ಕಾಲುಗಳನ್ನು ಮೇಲಕ್ಕೆತ್ತಿ. ಇಲ್ಲಿ ನೆನಪಿಡಬೇಕಾದ ವಿಷ್ಯವೆಂದರೆ ಎರಡೂ ಕಾಲನ್ನು ಕೇವಲ 30 ಡಿಗ್ರಿ ಎತ್ತರಕ್ಕೆ ಎತ್ತಬೇಕು. ಸ್ವಲ್ಪ ಹೊತ್ತು ಕಾಲು 30 ಡಿಗ್ರಿ ಎತ್ತರದಲ್ಲಿಯೇ ಇರಲಿ. ನಿಮ್ಮ ಉಸಿರಾಟ ಕ್ರಿಯೆ ಸಹಜವಾಗಿರಲಿ. 30 ಸೆಕೆಂಡುಗಳ ನಂತರ ಆಳವಾಗಿ ಉಸಿರಾಡುತ್ತ ಕಾಲುಗಳನ್ನು ನೆಲದ ಮೇಲೆ ಇಡಿ. ಇದನ್ನು ಉತ್ತಾನಪಾದಾಸನದ ಒಂದು ಚಕ್ರ ಎನ್ನಲಾಗುತ್ತದೆ. ಈ ಚಕ್ರವನ್ನು ನೀವು ಎರಡರಿಂದ ಮೂರು ಬಾರಿ ಮಾಡಬೇಕಾಗುತ್ತದೆ. ನಂತರ ಆ ಸಂಖ್ಯೆಯನ್ನು ಹೆಚ್ಚಿಸಬಹುದು.
ಉತ್ತಾನ ಪಾದಾಸನದಿಂದಾಗುವ ಲಾಭಗಳು :
- ಉತ್ತಾನಪಾದಾಸನ ಅಭ್ಯಾಸ ಮಾಡುವುದರಿಂದ ಹೊಟ್ಟೆ ನೋವಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಸದಾ ಹೊಟ್ಟೆ ನೋವಿನಿಂದ ಬಳಲುವವರು ಈ ಅಭ್ಯಾಸವನ್ನು ತಪ್ಪದೇ ಮಾಡಿ.
- ಅಜೀರ್ಣದ ಸಮಸ್ಯೆಯಿಂದ ಬಳಲುತ್ತಿರುವವರು ಈ ಉತ್ತಾನ ಪಾದಾಸನವನ್ನು ಪ್ರತಿ ದಿನ ಮಾಡಿದರೆ ಉತ್ತಮ. ಹೊಕ್ಕುಳನ್ನು ಸಮತೋಲನಗೊಳಿಸಲು ಉತ್ತಾನಪಾದಾಸನ ನಿಮಗೆ ನೆರವಾಗುತ್ತದೆ.
- ಬರೀ ಹೊಟ್ಟೆ ಸಮಸ್ಯೆಗೆ ಮಾತ್ರವಲ್ಲದೆ ಬೆನ್ನಿಗೂ ಈ ಭಂಗಿ ಒಳ್ಳೆಯದು. ಬೆನ್ನು ನೋವು ಬರಬಾರದು ಎನ್ನುವವರು ಉತ್ತಾನ ಪಾದಾಸನವನ್ನು ನಿಯಮಿತವಾಗಿ ಮಾಡಬೇಕು.
- ಇತ್ತೀಚಿನ ದಿನಗಳಲ್ಲಿ ಬೊಜ್ಜು ಸಾಮಾನ್ಯವಾಗಿದೆ. ಕೊಬ್ಬು ಹೆಚ್ಚಾಗಿ ಹೊಟ್ಟೆ ಊದಿಕೊಂಡಿರುತ್ತದೆ. ಅದನ್ನು ಕರಗಿಸಲು ಉತ್ತಾನಪಾದಾಸನವನ್ನು ಪ್ರತಿ ದಿನ ಮಾಡಬೇಕು, ಇದರಿಂದ ಹೊಟ್ಟೆ ಕೊಬ್ಬು ಕರಗುತ್ತದೆ.
ಉತ್ತಾನ ಪಾದಾಸನವನ್ನ ಈ ಕೆಳಗಿನವರು ಮಾಡಬಾರದು : ಉತ್ತಾನಪಾದಾಸನವನ್ನು ಎಲ್ಲರೂ ಮಾಡಲು ಸಾಧ್ಯವಿಲ್ಲ. ಕಿಬ್ಬೊಟ್ಟೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ, ಗರ್ಭಿಣಿಯರು ಈ ಆಸನವನ್ನು ಮಾಡಬಾರದು. ಒಂದು ವೇಳೆ ಬೆನ್ನು ನೋವಿನಿಂದ ಬಳಲುತ್ತಿದ್ದರೆ ಈ ಆಸನವನ್ನು ಮಾಡ್ಬೇಡಿ. ಈಗಾಗಲೇ ನೋವಿದ್ದರೆ ಅದು ಹೆಚ್ಚಾಗುವ ಸಾಧ್ಯತೆಯಿರುತ್ತದೆ. ಈ ಆಸನವನ್ನು ಯಾವಾಗಲೂ ಖಾಲಿ ಹೊಟ್ಟೆಯಲ್ಲಿ ಮಾಡಬೇಕು.
ಇದನ್ನೂ ಓದಿ : ಇಡಿ ವಿಚಾರಣೆ ಬಳಿಕ ಸೋನಿಯಾ ಗಾಂಧಿ ಭೇಟಿಗೆ ಗಂಗಾರಾಮ್ ಆಸ್ಪತ್ರೆಗೆ ತೆರಳಿದ ರಾಹುಲ್ ಗಾಂಧಿ…