ಬೆಂಗಳೂರು: ಬೆಂಗಳೂರು ನಗರ ಡಿಸಿಯಾಗಿದ್ದ ಮಂಜುನಾಥ್ ಗೆ ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿದ್ದು, ಅವರನ್ನು ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲಾಗಿದೆ.
ಎಸಿಬಿ ಅಧಿಕಾರಿಗಳು ಮಂಜುನಾಥ್ ಅವರನ್ನು ಕೋರಮಂಗಲದಲ್ಲಿರುವ ಜಡ್ಜ್ ನಿವಾಸಕ್ಕೆ ಕರೆದೋಯ್ದು ಜಡ್ಜ್ ಮುಂದೆ ಹಾಜರು ಪಡಿಸಿದ್ದರು. ನ್ಯಾಯಾಧೀಶರು ಮಂಜುನಾಥ್ ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ಮಂಜುನಾಥ್ ನನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆದೋಯ್ದಿದ್ದಾರೆ.
ಇದನ್ನೂ ಓದಿ: ACB ಪೊಲೀಸರಿಂದ ರಣಬೇಟೆ… ಬೆಂಗಳೂರು ನಗರ ಡಿಸಿಯಾಗಿದ್ದ ಮಂಜುನಾಥ್ ಅರೆಸ್ಟ್ …
ಇಂದು ಸಂಜೆ ಎಸಿಬಿ ಅಧಿಕಾರಿಗಳು IAS ಅಧಿಕಾರಿ ಮಂಜುನಾಥ್ ರನ್ನು ಅರೆಸ್ಟ್ ಮಾಡಿದ್ದರು. 38 ಗುಂಟೆ ಜಮೀನು ವ್ಯಾಜ್ಯ ಸಂಬಂಧ ಅರ್ಜಿ ಕ್ಲಿಯರ್ ಮಾಡೋಕೆ DC ಕಚೇರಿಯ ಉಪ ತಹಶೀಲ್ದಾರ್ ಮಹೇಶ್ 15 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ನಂತರ ಗುತ್ತಿಗೆದಾರ ಚಂದ್ರು ಬಳಿ ಮೇ 22ರಂದು 5 ಲಕ್ಷ ಪಡೆಯುವ ವೇಳೆ ಎಸಿಬಿಗೆ ಸಿಕ್ಕಿಬಿದ್ದಿದ್ರು.
ಈ ಪ್ರಕರಣದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ J ಮಂಜುನಾಥ್ ಪಾತ್ರದ ಬಗ್ಗೆಯೂ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ವಿಚಾರಣೆ ನಡೆಸಿದ ಎಸಿಬಿ ಅಧಿಕಾರಿಗಳು ಅವರಿಂದ ಹೇಳಿಕೆ ಪಡೆದಿದ್ದರು. ಮಂಜುನಾಥ್ ರನ್ನು ಆರೋಪಿಯನ್ನಾಗಿ ಸೇರಿಸಲು ಹೈಕೋರ್ಟ್ ಆದೇಶ ಕೊಟ್ಟ ನಂತರ FIR ದಾಖಲಿಸಲಾಗಿತ್ತು. 2ನೇ FIRನಲ್ಲಿ ಮಂಜುನಾಥ್ ರನ್ನು 3ನೇ ಆರೋಪಿಯಾಗಿ ಸೇರ್ಪಡೆ ಮಾಡಲಾಗಿತ್ತು. ಹೈಕೋರ್ಟ್ ಛೀಮಾರಿ ಹಾಕಿದ ಬೆನ್ನಲ್ಲೇ ಎಸಿಬಿ ಅಧಿಕಾರಿಗಳು ಮಂಜುನಾಥ್ ರನ್ನು ಅರೆಸ್ಟ್ ಮಾಡಿದ್ದಾರೆ.