ಬೆಂಗಳೂರು: ಐಟಿಸಿಟಿಯಲ್ಲಿ ರಸ್ತೆ ಗುಂಡಿಗೆ ಮತ್ತೊಂದು ಬಲಿಯಾಗಿದ್ದು, ಎಂ.ಎಸ್.ಪಾಳ್ಯದಲ್ಲಿ ಬೈಕ್ನಿಂದ ಬಿದ್ದು ಯುವಕ ಸಾವನಪ್ಪಿದ್ದಾನೆ. ಮೃತನ ಸಂಬಂಧಿಕರ ದೂರು ಆಧರಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉತ್ತರ ವಿಭಾಗ ಟ್ರಾಫಿಕ್ ಡಿಸಿಪಿ ಸವಿತಾ ಮಾಹಿತಿ ನೀಡಿದ್ದಾರೆ.
ಎಂಎಸ್ ಪಾಳ್ಯ- ಮುನೇಶ್ವರ ಲೇಔಟ್ ರಸ್ತೆಯಲ್ಲಿ ದುರಂತ ಸಂಭವಿಸಿದ್ದು, ಜಲಮಂಡಳಿ ಕಾಮಗಾರಿಗಾಗಿ ರಸ್ತೆ ಅಗೆಯಲಾಗಿತ್ತು. ಹಾವೇರಿ ಮೂಲದ 27 ವರ್ಷದ ಅಶ್ವಿನ್ ಎಂಬ ಯುವಕ ಬೈಕ್ನಿಂದ ಬಿದ್ದು ಸಾವನಪ್ಪಿದ್ದಾನೆ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಅಶ್ವಿನ್, ತಾಯಿಗೆ ಒಬ್ಬನೇ ಮಗನಾಗಿದ್ದ. ಸದ್ಯ ಘಟನಾ ಸ್ಥಳದಲ್ಲಿ ಅಶ್ವಿನ್ ಸ್ನೇಹಿತರು ಪ್ರತಿಭಟನೆ ನಡೆಸುತ್ತಿದ್ದು, ಜಲಮಂಡಳಿ ನಿರ್ಲಕ್ಷ್ಯ ಅಶ್ವಿನ್ ಸಾವಿಗೆ ಕಾರಣ ಎಂದು ಪ್ರೊಟೆಸ್ಟ್ ಮಾಡಲಾಗುತ್ತಿದೆ. ಘಟನೆ ನಡೆದಾಗ ಫೋನ್ ಮಾಡಿದ್ರೂ ಬೇಗ ಆಂಬ್ಯುಲೆನ್ಸ್ ಬರಲಿಲ್ಲ, ಕಾಲ್ ಮಾಡಿ 1 ಗಂಟೆಯಾದ್ರೂ ಬರಲಿಲ್ಲ ಎಂದು ಸ್ನೇಹಿತರ ಆಕ್ರೋಶ ವ್ಯಕ್ತ ಪಡಿಸುತ್ತಿದ್ದು, ಸ್ಥಳೀಯರೆ ಅಶ್ವಿನ್ನನ್ನು ಕಾರಿನಲ್ಲಿ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿದ್ದಾರೆ.
ರಸ್ತೆ ಗುಂಡಿಗೆ ಬಿದ್ದು ಯುವಕ ಬಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ವಿಭಾಗ ಟ್ರಾಫಿಕ್ ಡಿಸಿಪಿ ಸವಿತಾ ಮಾಹಿತಿ ನೀಡಿದ್ದು, ಅಪಘಾತ ಸ್ಥಳದಲ್ಲಿ ಜಲಮಂಡಳಿಯವರು ರಸ್ತೆ ಅಗೆದಿದ್ದರು. ಅಗೆದ ರಸ್ತೆಯನ್ನು ಸರಿಯಾಗಿ ಮುಚ್ಚಿ ಡಾಂಬರು ಹಾಕಿರಲಿಲ್ಲ, ತಡರಾತ್ರಿ ಸೆಲ್ಫ್ ಆ್ಯಕ್ಸಿಡೆಂಟ್ನಿಂದ ಯುವಕ ಮೃತ ಪಟ್ಟಿದ್ದಾನೆ. ಈ ಸಂಬಂಧ ಯಲಹಂಕ ಟ್ರಾಫಿಕ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ ಎಂದು ಬಿಟಿವಿಗೆ ಮಾಹಿತಿ ನೀಡಿದ್ದಾರೆ.

ಮೃತ ಯುವಕ ಹೆಲ್ಮೆಟ್ ಧರಿಸದೇ ಇದ್ದುದರಿಂದ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಯುವಕ ಮೃತಪಟ್ಟಿದ್ದಾನೆ. ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು, ಜಲಮಂಡಳಿ ಅಧಿಕಾರಿ, BBMP ಗುತ್ತಿಗೆದಾರರು ಮೇಲೆ ಕೇಸ್ ದಾಖಲಿಸ್ತೇವೆ , ಮೃತನ ಸಂಬಂಧಿಕರ ದೂರು ಆಧರಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉತ್ತರ ವಿಭಾಗ ಟ್ರಾಫಿಕ್ ಡಿಸಿಪಿ ಸವಿತಾ ಮಾಹಿತಿ ನೀಡಿದ್ದಾರೆ.








