ನವದೆಹಲಿ: ತುಮಕೂರಿನ ಮಹಿಂದ್ರಾ ಶೋರೂಂ ನ ಸಿಬ್ಬಂದಿ ರೈತ ಕೆಂಪೇಗೌಡ ಅವರಿಗೆ ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹೀಂದ್ರಾ ಕಂಪನಿ ಅಧ್ಯಕ್ಷ ಆನಂದ್ ಮಹೀಂದ್ರಾ ಪ್ರತಿಕ್ರಿಯೆ ನೀಡಿದ್ದು, ಘಟನೆ ಕುರಿತು ವಿಷಾದ ವ್ಯಕ್ತಪಡಿಸಿದ್ದಾರೆ.
ಘಟನೆ ಕುರಿತು ನೆಟ್ಟಿಗರೊಬ್ಬರ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಆನಂದ್ ಮಹೀಂದ್ರಾ ಅವರು ‘ಮಹೀಂದ್ರಾ ಕಂಪನಿಯ ಮೂಲ ಉದ್ದೇಶ ಸಮುದಾಯ ಮತ್ತು ಎಲ್ಲಾ ಪಾಲುದಾರರ ಏಳಿಗೆಯಾಗಿದೆ ಮತ್ತು ಪ್ರತಿಯೊಬ್ಬ ವ್ಯಕ್ತಿಯ ಘನತೆ ಮತ್ತು ಗೌರವವನ್ನು ಎತ್ತಿಹಿಡಿಯುವುದು ನಮ್ಮ ಕಂಪನಿಯ ಪ್ರಮುಖ ಮೌಲ್ಯವಾಗಿದೆ. ಇದರಲ್ಲಿ ರಾಜಿಯಾಗುವುದಿಲ್ಲ. ಈ ಪ್ರಕರಣದ ಕುರಿತು ತಕ್ಷಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
The Core Purpose of @MahindraRise is to enable our communities & all stakeholders to Rise.And a key Core Value is to uphold the Dignity of the Individual. Any aberration from this philosophy will be addressed with great urgency. https://t.co/m3jeCNlV3w
— anand mahindra (@anandmahindra) January 25, 2022
ತುಮಕೂರಿನ ರೈತ ಕೆಂಪೇಗೌಡ ಎಂಬುವವರು ಕಾರು ಖರೀದಿಸಲು ತುಮಕೂರಿನ ರಾಮನಪಾಳ್ಯದ ಮಹೀಂದ್ರ ಶೋರೂಂ ಗೆ ಭೇಟಿ ನೀಡಿದ್ದರು. ಈ ವೇಳೆ ಶೋರೂಂ ಸಿಬ್ಬಂದಿ ಅವರಿಗೆ ಅವಮಾನ ಮಾಡಿದ್ದರು. ಬಳಿಕ ಅವರು ಕೇವಲ 1 ಗಂಟೆಯಲ್ಲಿ 10 ಲಕ್ಷ ರೂ. ಹಣ ತಂದು ವಾಹನ ನೀಡುವಂತೆ ಪಟ್ಟು ಹಿಡಿದಿದ್ದರು. ಈ ಘಟನೆ ರಾಷ್ಟ್ರಾದ್ಯಂತ ಸುದ್ದಿಯಾಗಿತ್ತು.