ನ್ಯೂಯಾರ್ಕ್: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳಿಂದ ಹತ್ಯೆಗೀಡಾದ ಡ್ಯಾನಿಶ್ ಸಿದ್ದಿಕಿ ಸೇರಿದಂತೆ ನಾಲ್ವರು ಭಾರತೀಯ ಫೋಟೋಜರ್ನಲಿಸ್ಟ್ ಗಳಿಗೆ ಪ್ರತಿಷ್ಠಿ ಪುಲಿಟ್ಜರ್ ಪ್ರಶಸ್ತಿ ಲಭಿಸಿದೆ.
ರಾಯಿಟರ್ಸ್ ಸುದ್ದಿ ಸಂಸ್ಥೆಯ ಡ್ಯಾನಿಶ್ ಸಿದ್ದಿಕಿ, ಅದ್ನಾನ್ ಅಬಿದಿ, ಸನ್ನಾ ಇರ್ಷಾದ್ ಮಟ್ಟೂ ಮತ್ತು ಅಮಿತ್ ದೇವ್ ಗೆ ಪುಲಿಟ್ಜರ್ ಪ್ರಶಸ್ತಿ ಲಭಿಸಿದೆ. ಡ್ಯಾನಿಶ್ ಸಿದ್ದಿಕಿ ಕೊರೋನಾ ಸೋಂಕಿನ ಸಂದರ್ಭದಲ್ಲಿ ತೆಗೆದಿದ್ದ ಸೋಂಕಿನಿಂದ ಮೃತಪಟ್ಟವರ ಸಾಮೂಹಿಕ ಅಂತ್ಯಕ್ರಿಯೆ ಫೋಟೋಗೆ ಪುಲಿಟ್ಜರ್ ಪ್ರಶಸ್ತಿ ಒಲಿದಿದೆ.
ಇದು ಡ್ಯಾನಿಶ್ ಸಿದ್ದಿಕಿ ಹಾಗೂ ಅದ್ನಾನ್ ಅಬಿದಿ ಅವರಿಗೆ ಲಭಿಸಿದ ಎರಡನೇ ಪುಲಿಟ್ಜರ್ ಪ್ರಶಸ್ತಿಯಾಗಿದೆ. ಈ ಹಿಂದೆ 2018 ರಲ್ಲಿ ರೋಹಿಂಗ್ಯಾ ಮುಸ್ಲಿಮರ ಸಮಸ್ಯೆ ಕುರಿತು ಕ್ಲಿಕ್ಕಿಸಿದ್ದ ಫೋಟೋಗೆ ಪುಲಿಟ್ಜರ್ ಪ್ರಶಸ್ತಿ ಲಭಿಸಿತ್ತು.
The Pulitzer Prize for feature photography is awarded to Adnan Abidi, Sanna Irshad Mattoo, Amit Dave and the late Danish Siddiqui of Reuters for the coverage of COVID in India https://t.co/ukVBIkTskW pic.twitter.com/A3e7b3RpGh
— Reuters Pictures (@reuterspictures) May 9, 2022
ಅಫ್ಘಾನಿಸ್ತಾನದಲ್ಲಿ ಆಫ್ಘನ್ ಸೇನೆ ಮತ್ತು ತಾಲಿಬಾನಿಗಳ ನಡುವೆ ನಡೆಯುತ್ತಿದ್ದ ಸಂಘರ್ಷದ ವರದಿಗಾಗಿ ಡ್ಯಾನಿಶ್ ಸಿದ್ದಿಕಿ ಅಫ್ಘಾನಿಸ್ತಾನದ ಕಂದಹಾರ್ ಗೆ ತೆರಳಿದ್ದರು. ಅವರು ವರದಿ ಮಾಡುತ್ತಿದ್ದ ಸಂದರ್ಭದಲ್ಲಿ ತಾಲಿಬಾನಿಗಳ ದಾಳಿಯಲ್ಲಿ ಡ್ಯಾನಿಶ್ ಸಿದ್ದಿಕಿ ಮೃತಪಟ್ಟಿದ್ದರು.
ಮುಂಬೈನಲ್ಲಿ ಜನಿಸಿದ ಡ್ಯಾನಿಶ್ ಸಿದ್ದಿಕಿ ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದರು. ಬಳಿಕ 2007 ರಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಎಜೆಕೆ ಮಾಸ್ ಕಮ್ಯುನಿಕೇಷನ್ ರಿಸರ್ಚ್ ಸೆಂಟರ್ ನಲ್ಲಿ ಪತ್ರಿಕೋದ್ಯಮ ಪದವಿ ಪಡೆದಿದ್ದರು. ಅವರು 2008 ರಿಂದ 2010 ರ ವರೆಗೆ ಇಂಡಿಯಾ ಟುಡೆ ವಾಹಿನಿಯಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದರು. 2010 ರಲ್ಲಿ ಅವರು ರಾಯಿಟರ್ ಸುದ್ದಿಸಂಸ್ಥೆಗೆ ಫೋಟೋ ಜರ್ನಲಿಸ್ಟ್ ಆಗಿ ಸೇರ್ಪಡೆಯಾಗಿದ್ದರು.
ಇವರು ವಿಶ್ವದ ಹಲವು ಭಾಗಗಳಲ್ಲಿ ಕಾರ್ಯನಿರ್ವಹಿಸಿದ್ದು, ಅಫ್ಘಾನಿಸ್ತಾನ ಮತ್ತು ಇರಾಕ್ ನ ಯುದ್ಧ, ರೋಹಿಂಗ್ಯಾ ನಿರಾಶ್ರಿತರ ಸಮಸ್ಯೆ, ಹಾಂಗ್ ಕಾಂಗ್ ಪ್ರತಿಭಟನೆ, ನೇಪಾಳ ಭೂಕಂಪದ ಸುದ್ದಿಗಳನ್ನು ವರದಿ ಮಾಡಿದ್ದರು. ಅವರು ರೋಹಿಂಗ್ಯಾ ನಿರಾಶ್ರಿತರ ಸಮಸ್ಯೆ ವರದಿ ಮಾಡುವಾಗ ತೆಗೆದಿದ್ದ ಫೋಟೋಗಾಗಿ 2018 ರಲ್ಲಿ ದಾನಿಶ್ ಸಿದ್ದಿಕಿ ಮತ್ತು ಅವರ ಸಹೋದ್ಯೋಗಿ ಅದ್ನಾನ್ ಅಬಿದಿ ಅವರಿಗೆ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ ದೊರೆತಿತ್ತು.